ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ, ಸರ್ಕಾರವೇ ಹಣ ನೀಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ! | JANATA NEWS
ಮಡಿಕೇರಿ : ಸರ್ಕಾರವೇ ಹಣ ಕೊಟ್ಟು ಜನರನ್ನ ಕರೆಸಿ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದರು.
ನಾನು ಬಂದು ಮಳೆ ಹಾನಿಯಾದ ಪ್ರದೇಶಗಳನ್ನು ನೋಡ್ತೀನಿ ಅಂತ ಕಾರ್ಯಕರ್ತರನ್ನು ಬಿಟ್ಟು ಪ್ರತಿಭಟನೆ ಮಾಡಿಸಿದ್ದಾರೆ. ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ ಹೀಗೆ ಪ್ರತಿಭಟನೆ ಮಾಡಿದ್ದಾರೆ ಎಂದರು.
ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ ಹೀಗೆ ಪ್ರತಿಭಟನೆ ಮಾಡಿದ್ದಾರೆ. ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ? ನಾವು ಅಲ್ಲಿಂದಲೇ ಪ್ರತಿಭಟನೆ ಮಾಡಿಕೊಂಡು ಬಂದಿರೋದು. ನಾವು ಹೋರಾಟ ಮಾಡೋಕೆ ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ. ನಮ್ಮ ಕಾರ್ಯಕರ್ತರು ಬೀದಿಗಿಳಿದ್ರೆ ಬಿಜೆಪಿಯವರಿಗೆ ಕೊಡಗಿನಲ್ಲೇ ತಿರುಗಾಡೋಕೆ ಆಗಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ರವಾನಿಸಿದರು.
ತಮ್ಮ ಭೇಟಿಯ ವೇಳೆ ಪ್ರತಿಭಟನೆ ನಡೆಸಲು ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರವೇ ಹಣ ನೀಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಈ ಎಲ್ಲಾ ಪ್ರತಿಭಟನೆಗಳು ಭ್ರಷ್ಟ ಮತ್ತು ಕಳಪೆ ಗುಣಮಟ್ಟದ ಪರಿಹಾರ ಕಾಮಗಾರಿಗಳನ್ನು ಮುಚ್ಚಿಹಾಕುವ ಯತ್ನವಾಗಿವೆ. ಟಿಪ್ಪು ಜಯಂತಿಯನ್ನು ಹಲವಾರು ವರ್ಷಗಳಿಂದ ಆಚರಿಸಲಾಗುತ್ತಿದ್ದು, ಸಮಸ್ಯೆಯ ನಂತರ ಹಲವು ಬಾರಿ ಕೊಡಗಿಗೆ ಭೇಟಿ ನೀಡಿದ್ದೇನೆ. ಆಗ ಎಲ್ಲಾ ಬಿಜೆಪಿ ಕಾರ್ಯಕರ್ತರು ಸತ್ತಿದ್ದರಾ? ಎಂದು ಪ್ರಶ್ನಿಸಿದರು.
ಚುನಾಯಿತ ಜನಪ್ರತಿನಿಧಿಗಳು ಗುತ್ತಿಗೆದಾರರೊಂದಿಗೆ ಸೇರಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ. 'ಡಿಸಿ ಕಚೇರಿ ಪಕ್ಕದಲ್ಲಿರುವ ತಡೆಗೋಡೆಯ ಭ್ರಷ್ಟ ಕಾಮಗಾರಿಯನ್ನು ಪರಿಶೀಲಿಸದಂತೆ ಪ್ರತಿಭಟನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನಡೆದಿರುವ ಭ್ರಷ್ಟ ಪರಿಹಾರ ಕಾಮಗಾರಿಗಳ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ, ಮುಂಬರುವ ಚುನಾವಣೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. 2018, 19, 20ರಲ್ಲಿ ಆದ ಮಳೆಯ ಹಾನಿಗೆ ಸರ್ಕಾರ ಇನ್ನೂ ಕೂಡ ಪರಿಹಾರ ನೀಡಿಲ್ಲ. ಸೇತುವೆ ತಡೆಗೋಡೆಗಳನ್ನು ತೀರಾ ಕಳಪೆಯಾಗಿ ಮಾಡಿದ್ದಾರೆ. ಅದಕ್ಕೆ ಅವೆಲ್ಲಾ ಹೀಗಾಗಿವೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.